Monday, June 4, 2012

ಶುಕ್ರ ಸಂಕ್ರಮ

‘೬ರಂದು ಆಕಾಶದಲ್ಲಿ ಶುಕ್ರ ಸಂಕ್ರಮ ವೀಕ್ಷಿಸಿ’

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ.

ಆಕಾಶದಲ್ಲಿ ಅಪರೂಪವಾಗಿ ಮೂಡುವಂತಹ ಶುಕ್ರ ಸಂಕ್ರಮವು ಜೂನ್ ೬ರಂದು  ಸಂಭವಿಸಲಿದ್ದು, ಅದನ್ನು ವೀಕ್ಷಿಸುವ ಅಪೂರ್ವ ಅವಕಾಶ ಕಳೆದುಕೊಳ್ಳಬೇಡಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಪ್ರೊ. ಎಸ್.ಎಂ. ಶಶಿಧರ ಕರೆ ನೀಡಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಆಶ್ರಯದಲ್ಲಿ ನಡೆದ ಶುಕ್ರ ಸಂಕ್ರಮ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಯೂಲ ವ್ಯಕ್ತಿಗಳಾಗಿ ಮಾತನಾಡಿದರು.

ಈವರೆಗೆ ೭ ಶುಕ್ರ ಸಂಕ್ರಮ: ಜೂನ್ ೬ರಂದು ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಗ್ಗೆ ೧೦-೨೦ರ ವರೆಗೆ ಶುಕ್ರ ಗ್ರಹ ಸೂರ್ಯನ ಮುಂದೆ ಹಾದು ಹೋಗಲಿದ್ದು, ಇದನ್ನು ಶುಕ್ರ ಸಂಕ್ರಮ ಎನ್ನಲಾಗುತ್ತದೆ. ಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದೆ. ದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮ ವೀಕ್ಷಣೆಗೆ ಲಭ್ಯವಾಗಿದೆ. ಶತಮಾನಕ್ಕೂ ಮೀರಿದ ಅವಧಿಯಲ್ಲಿ ಜೋಡಿಯಾಗಿ (ಎಂಟು ವರ್ಷಗಳ ಮಧ್ಯಂತರ ಅವಧಿಯಂತೆ) ಶುಕ್ರ ಸಂಕ್ರಮ ಸಂಭವಿಸುತ್ತದೆ ಎಂದು ಅವರು ವಿವರಿಸಿದರು.

ಮುಂದಿನ ಶುಕ್ರ ಸಂಕ್ರಮ ೨೧೧೭ರಲ್ಲಿ: ಈ ಹಿಂದಿನ ಸಂಕ್ರಮಗಳು ಕ್ರಮವಾಗಿ ೧೬೩೧ ಮತ್ತು ೧೬೩೯, ೧೭೬೧ ಮತ್ತು ೧೭೬೯ , ೧೮೭೪ ಮತ್ತು ೧೮೮೨, ಈಚೆಗೆ ೨೦೦೪ರಲ್ಲಿ ಸಂಭವಿಸಿರುತ್ತವೆ. ಶುಕ್ರ ಸಂಕ್ರಮ ಸಂಭವಿಸುವಾಗ ಒಬ್ಬ ಶಾಲಾ ಬಾಲಕ ಕೂಡ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಸುಲಭವಾಗಿ ಅಳೆಯಬಹುದು. ವಿಪರ್ಯಾಸವೆಂದರೆ ಐಸಾಕ್ ನ್ಯೂಟನ್ನನೂ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಶುಕ್ರ ಸಂಕ್ರಮ ವೀಕ್ಷಿಸಲು ಜೀವಮಾನವಿಡೀ ಕುತೂಹಲಿಗಳಾಗಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಇಂಥ ಅಪೂರ್ವ ಅವಕಾಶ ನಮಗೆ ದೊರೆತಿದೆ. ಇದು ನಮಗೂ ಕೊನೆಯ ಅವಕಾಶ. ಈ ಶತಮಾನದ ಕೊನೆಯ ಘಟನೆ. ಮುಂದಿನ ಶುಕ್ರ ಸಂಕ್ರಮವು ೧೦೫ ವರ್ಷಗಳ ನಂತರ ಅಂದರೆ ೨೧೧೭ರಲ್ಲಿ ನೋಡಲು ಸಾಧ್ಯ ಎಂದು ಅವರು ವಿವರಿಸಿದರು.

ಸೌರಕನ್ನಡಕ ಮೂಲಕ ವೀಕ್ಷಿಸಿ: ಶುಕ್ರ ಸಂಕ್ರಮ ವೀಕ್ಷಿಸುವ ಸಂದರ್ಭದಲ್ಲಿ ಪ್ರಖರ ಸೂರ್ಯ ಕಿರಣಗಳಿಂದ ಕಣ್ಣಿಗೆ ಹಾನಿಯಾಗದಂತೆ ಸೂಕ್ತ ರಕ್ಷಣಾ ವಿಧಾನಗಳನ್ನು ಅವರು ಸೂಚಿಸಿದರು. ವೈಜ್ಞಾನಿಕವಾಗಿ ತಯಾರಿಸಿ ದೃಢೀಕರಿಸಲ್ಪಟ್ಟ ಸೌರಕನ್ನಡಕಗಳ ಮೂಲಕ ಸುರಕ್ಷಿತವಾಗಿ ಶುಕ್ರ ಸಂಕ್ರಮ ವೀಕ್ಷಿಸಬಹುದು. ಇಂತಹ ಕನ್ನಡಕಗಳ ಮೂಲಕ ಶುಕ್ರಗ್ರಹವು ಸೂರ್ಯನನ್ನು ದಾಟುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಸಾಮಾನ್ಯ ಕನ್ನಡಿಯನ್ನು ಬಳಸಿ ಸೂರ್ಯ ಬಿಂಬವನ್ನು ಕತ್ತಲ ಕೋಣೆಯಲ್ಲಿ ಮೂಡಿಸಿ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು ಎಂದು ಅವರು ಹೇಳಿದರು.

ಪ್ರಾಚಾರ್ಯ ಡಾ.ಪಿ. ಖಗೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಗೋಳ ಶಾಸ್ತ್ರವು ಅನೇಕ ವಿಸ್ಮಯಗಳ ಆಗರವಾಗಿದ್ದು, ಮಕ್ಕಳಲ್ಲಿ ಆಕಾಶ ವೀಕ್ಷಣೆಯ ಆನಂದ ಆಸಕ್ತಿ ತುಂಬಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚೇತನ ಸಾಹಿತ್ಯ ಸಂಸ್ಥೆ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಸದಸ್ಯ ಪ್ರಭಾಕರ ಕೆಂದೂಳಿಯವರು ಮಾತನಾಡಿ, ತಂತ್ರಜ್ಞಾನ ಅಬ್ಬರದ ನಡುವೆ ಇಂತಹ ಕಾರ್ಯಕ್ರಮಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನೆರವಾಗಲಿದೆ ಎಂದು ಅವರು ಹೇಳಿದರು.

ಪಿಡಿಐಟಿಯ ಪ್ರಾಧ್ಯಾಪಕ ಪ್ರೊ. ವಸಂತಮ್ಮ ಹಾಗೂ ಪಾರ್ವತಿ ಕಡ್ಲಿಯವರು, ಬಿ.ಎಂ. ಶ್ರೀನಾಥ ಸಭೆಯಲ್ಲಿ ಇದ್ದರು. ಅಧ್ಯಾಪಕಿ ಸುಮಲತಾ ಸ್ವಾಗತಿಸಿದರು. ಫಿರ್‌ದೋಶ್ ಪರವೀನ್ ನಿರೂಪಿಸಿದರು. ಟಿ.ಎಂ.ನಾಗಭೂಷಣ ವಂದಿಸಿದರು.