Friday, September 6, 2013

ಗ್ರಾಮೀಣ ವಿದ್ಯಾರ್ಥಿಗಳು ಅಪ್ಪಟ ಪ್ರತಿಭೆಗಳು



ರಾಷ್ಟ್ರ ಮಟ್ಟದ ಐಇಎಸ್ ಪರೀಕ್ಷೆಯಲ್ಲಿ 32ನೆ ಸ್ಥಾನ ಪಡೆದ ಪಿ.ಡಿ.ಐ.ಟಿ. ವಿದ್ಯಾರ್ಥಿಯ ಸಾಧನೆ
“ದೃಢ ಸಂಕಲ್ಪಹಾಗೂ ಪರಿಶ್ರಮದಿಂದ ಯಶಸ್ಸು”
ಹೊಸಪೇಟೆ ಡಿ ೬ ಸೆಪ್ಟೆಂಬರ್೨೦೧೩
ಈರಪ್ಪ ಬಿರುಕಲ್  ಅವರನ್ನು ಸನ್ಮಾನಿಸುತ್ತಿರುವ ಪಿ.ಡಿ.ಐ.ಟಿ.ಯ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ 
ಹಾಗೂ E&CE ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎಂ.ಶಶಿಧರ


 “ಗ್ರಾಮೀಣ ವಿದ್ಯಾರ್ಥಿಗಳು ಅಪ್ಪಟ ಪ್ರತಿಭೆಗಳು. ಅವರು ಕೀಳರಿಮೆ ತೊಡೆದು ರಾಷ್ಟ್ರ ಮಟ್ಟದ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಸ್ಪರ್ಧಿಸಿ ಯಶಸ್ಸು ಸಾಧಿಸಬೇಕು ಎಂದು ಅಖಿಲ ಭಾರತ ಮಟ್ಟದ ಎಂಜಿನೀಯರಿಂಗ್ ಸೇವಾ ಪರೀಕ್ಷೆ (ಐಇಎಸ್) ಯಲ್ಲಿ ರಾಷ್ಟ್ರಕ್ಕೆ 32 ನೇ ಸ್ಥಾನ ಗಳಿಸಿ ಯಶಸ್ವಿಯಾಗಿರುವ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ (E&CE) ವಿಭಾಗದಿಂದ ಉತ್ತೀರ್ಣರಾದ ವಿದ್ಯಾರ್ಥಿ ಈರಪ್ಪ ಬಿರುಕಲ್ ಹೇಳಿದರು.


ಅವರು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ  ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಕುಗ್ರಾಮದಿಂದ  ಬಂದ ತಾವು ಅಂಗ್ಲ ಭಾಷಾ ಪ್ರಾವೀಣ್ಯತೆಯ ನಗರದ ವಿದ್ಯಾರ್ಥಿಗಳ ಜೊತೆ ಹಾಗು ಐಐಟಿ ಯಂಥ ಪ್ರತಿಷ್ಟಿತ ಸಂಸ್ಥೆಗಳ ವಿದ್ಯಾರ್ಥಿಗಳ ಜೊತೆ ಸ್ಪರ್ದೆಯಲ್ಲಿ ಮುನ್ನಡೆಯುವುದು ಸಾಹಸದ ಕೆಲಸವಾಗಿತ್ತು. ಆದರೂ ದೃಢ ಸಂಕಲ್ಪಹಾಗೂ ಪರಿಶ್ರಮದಿಂದ ಯಶಸ್ಸು ಸಾಧ್ಯವಾಯಿತು ಎಂದು  ಈರಪ್ಪ ಬಿರುಕಲ್ ತಿಳಿಸಿದರು. ತಮ್ಮ ಯಶಸ್ಸಿಗೆ  ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಾಪಕ ವೃಂದದ ಪ್ರೊತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.


ತಮ್ಮ ಸಾಧನೆಯ ಮೂಲಕ ಕಾಲೇಜಿಗೆ  ಕೀರ್ತಿ ತಂದ  ಈರಪ್ಪ ಬಿರುಕಲ್ ಅವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ ಹಾಗು E&CE ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎಂ.ಶಶಿಧರ ಅವರು ಸತ್ಕರಿಸಿ ಗೌರವಿಸಿದರು. ಕೇಂದ್ರೀಯ ಪೋಲಿಸ್ ಪಡೆಗೆ ಸಹ-ಕಮ್ಯಾಡೆಂಟ್ ಆಗಿ ಆಯ್ಕೆಯಾಗಿರುವ ಮತ್ತೊಬ್ಬ ವಿದ್ಯಾರ್ಥಿ ಸಮರ್ಥ ಕೊಪ್ಪದ ಅವರನ್ನು ಸತ್ಕರಿಸಲಾಯಿತು.


ಕೇಂದ್ರಿಯ ಆಡಳಿತ ಸೇವೆಗೆ ಐಎಎಸ್ ಇರುವಂತೆ, ಕೆಂದ್ರೀಯ ಇಲಾಖೆಗಳಲ್ಲಿ ತಾಂತ್ರಿಕ ಸೇವೆಗಳ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಲು ಐಇಎಸ್ ಪರಿಕ್ಷೆಗಳನ್ನು ಯು.ಪಿ.ಎಸ್.ಸಿ. ಪ್ರತಿ ವರ್ಷ ಜರುಗಿಸುತ್ತದೆ. ಉತ್ತರ ಕರ್ನಾಟಕದಿಂದ ಪ್ರಸಕ್ತ ವರ್ಷದಲ್ಲಿ  ಐಇಎಸ್ ಉತ್ತೀರ್ಣರಾದ ಏಕೈಕ ಅಭ್ಯರ್ಥಿ ಈರಪ್ಪ; ಇವರ ಸಾಧನೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಆತ್ಮ ವಿಶ್ವಾಸ ತುಂಬಲಿ”  ಎಂದು ಪ್ರೊ.ಎಸ್.ಎಂ.ಶಶಿಧರ ನುಡಿದರು.


ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕವೇ  ತಮ್ಮ ಗುರುವೃಂದಕ್ಕೆ ಕೃತಜ್ಞತೆ ಸಲ್ಲಿಸಬೇಕು. ಶಿಕ್ಷಕರ ಸಾರ್ಥಕತೆ, ಸಂತೋಷಗಳು  ವಿದ್ಯಾರ್ಥಿಗಳ ಸಾಧನೆಯಲ್ಲಿ ಅಡಗಿವೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ   ಕಾಲೇಜಿನ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ ಅಭಿಪ್ರಾಯಪಟ್ಟರು. ಡಾ.ಯೆರ್ರಿಸ್ವಾಮಿ, ಮಹೇಶ್ ಶೀಲವಂತ  ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು.


ಫಿರ್ದೊಶ್ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು. ಸುಮಲತ ಸ್ವಾಗತಿಸಿದರು. ಶಮಿತಾ ವಂದನಾರ್ಪಣೆ ಸಲ್ಲಿಸಿದರು.

No comments:

Post a Comment